Thursday, Mar 28 2024 | Time 16:30 Hrs(IST)
Karnataka Share

ಸದ್ಯದಲ್ಲೇ ಮೈತ್ರಿ ಸರ್ಕಾರಕ್ಕೆ ರಾಜ್ಯದಿಂದ ಮುಕ್ತಿ : ಬಿ ಎಸ್ ಯಡಿಯೂರಪ್ಪ ಭವಿಷ್ಯ

ಸದ್ಯದಲ್ಲೇ ಮೈತ್ರಿ ಸರ್ಕಾರಕ್ಕೆ ರಾಜ್ಯದಿಂದ ಮುಕ್ತಿ : ಬಿ ಎಸ್ ಯಡಿಯೂರಪ್ಪ ಭವಿಷ್ಯ
ಸದ್ಯದಲ್ಲೇ ಮೈತ್ರಿ ಸರ್ಕಾರಕ್ಕೆ ರಾಜ್ಯದಿಂದ ಮುಕ್ತಿ : ಬಿ ಎಸ್ ಯಡಿಯೂರಪ್ಪ ಭವಿಷ್ಯ

ಬೆಂಗಳೂರು,ಜೂ 24(ಯುಎನ್ಐ) ಆದಷ್ಟು ಶೀಘ್ರದಲ್ಲೆ ಮೈತ್ರಿ ಸರ್ಕಾರಕ್ಕೆ ರಾಜ್ಯದಿಂದ ಮುಕ್ತಿ ಸಿಗಲಿದ್ದು, ಜನಪ್ರತಿನಿಧಿಗಳೇ ನಿಮಗೆ ಮುಕ್ತಿ ದೊರಕಿಸುತ್ತಾರೆ ಎನ್ನುವ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗುವ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ.

ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ 'ಗ್ರಾಮ ವಾಸ್ತವ್ಯ-ಶೂನ್ಯ ಸಾಧನೆ ಈವರೆಗೆ' 'ಸ್ಟಾರ್ ಹೋಟೆಲ್ ನಿಂದ ಆಡಳಿತ ಖಜಾನೆ ಲೂಟಿ' 'ಈಗ ಮತ್ತೆ ಗ್ರಾಮ ವಾಸ್ತವ್ಯದ‌ ಡ್ರಾಮಾ'ಹೆಸರಿನ ಕಿರುಹೊತ್ತಿಗೆಯನ್ನು ಬಿಡುಗಡೆ ಮಾತನಾಡಿದರು, ತಾವು ಎಂದೂ ಮುಖ್ಯಮಂತ್ರಿಯಾಗುವ ಕನಸು ಕಂಡಿಲ್ಲ .ನಾನು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಎಂದು ಕನಸು ಕಾಣುತ್ತಿರುವುದು ಸಿದ್ದರಾಮಯ್ಯ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

ಪುಸ್ತಕದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ನೇರವಾಗಿ 10 ಪ್ರಶ್ನೆಗಳನ್ನು ಕೇಳಿ ,ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಪ್ರಶ್ನೆಗಳ ಸರಮಾಲೆ ಇಂತಿದೆ ;

1 ರೈತರ ಆತ್ಮಹತ್ಯೆ ಬಗ್ಗೆ ನಿಮಗೆ ಮಾಹಿತಿ ಇದೆಯೇ ?

2 ರೈತರ ಸಂಪೂರ್ಣ ಸಾಲಮನ್ನಾ ಮಾಡಿದ್ದೀರಾ?

3ರಾಜ್ಯದಲ್ಲಿ ಬರ ಇದ್ದರೂ , ನೀವು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಯಾಕೆ?

4 ಐಎಂಎ ಮಾಲೀಕನ ಜೊತೆ ಕುಳಿತು ಬಿರಿಯಾನಿ ತಿಂದ ನೀವು, ವಂಚನೆಗೆ ಒಳಗಾದವರಿಗೆ ಯಾವ ರೀತಿ ನ್ಯಾಯ ಕೊಡುತ್ತೀರಿ ?

5 ಐಎಂಎ ಹಗರಣದಲ್ಲಿ 6 ಸಾವಿರ ಕೋಟಿ ಅಲ್ಪಸಂಖ್ಯಾತ ಬಡ ಜನರ ಹಣದೊಂದಿಗೆ ಪರಾರಿಯಾದ ಮನ್ಸೂರ್ ಅಹಮದ್ ಜೊತೆ ಬಿರಿಯಾನಿ ಊಟ ಎಷ್ಟರ ಮಟ್ಟಿಗೆ ಸರಿ?

6. ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಶೋಷಣೆಗೊಳಗಾಗಿರುವ ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಹಿರಿಯರು ಮತ್ತು ಅಲ್ಲದೇ ವಿಪಕ್ಷವೂ ಕೂಡ ಬೇಡಿಕೆಯನ್ನು ಮಂಡಿಸಿದರೂ ಸಿಬಿಐ ತನಿಖೆಗೆ ನೀಡುತ್ತಿಲ್ಲವೇಕೆ?

7. ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸುವಾಗಲೇ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆ ನಿಮ್ಮ ಉತ್ತರವೇನು?

8. ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ 1 ಎಕರೆಯಂತೆ ಅತಿ ಕನಿಷ್ಠ ಬೆಲೆಗೆ ಮಾರಾಟ ಮಾಡುವ ಸಂಬಂಧ ತಾವು ಪಡೆದಿರುವ ಕಿಕ್ ಬ್ಯಾಕ್ ಎಷ್ಟು?

9. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಇಷ್ಟೊಂದು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳು, ಸರ್ಕಾರಿ ಉದ್ಯೋಗಿಗಳು, ಮಾಧ್ಯಮಗಳಿಂದ ಮಾಹಿತಿ ಪಡೆದು ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಹಠ ಏಕೆ? ಇದು ಪ್ರಚಾರದ ಗಿಮಿಕ್ ಅಲ್ಲವೇ? ಹಿಂದಿನ ಗ್ರಾಮ ವಾಸ್ತವ್ಯದ ಸಾಧನೆಯ ಶ್ವೇತ ಪತ್ರ ನೀಡುವಿರಾ?

10. ಮುಖ್ಯಮಂತ್ರಿಗಳೇ ದಿಕ್ಕು ತಪ್ಪಿದ ಆಡಳಿತ ಹಾಗೂ ದಿನನಿತ್ಯ ನಿಮ್ಮ ಮೈತ್ರಿ ಪಕ್ಷಗಳ ಬೀದಿ ಜಗಳದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮುಕ್ತಿ ಯಾವಾಗ?

ರೈತರ 48 ಸಾವಿರ ಕೋಟಿ ಸಾಲ ಮನ್ನಾ 24 ಗಂಟೆಗಳಲ್ಲಿ ಮಾಡುತ್ತೇನೆಂದು ಹೇಳಿದ್ದ ತಾವು 13 ತಿಂಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ, ರೈತರಿಗೆ ಹೊಸ ಸಾಲ ನೀಡುತ್ತಿಲ್ಲ, ಋಣಮುಕ್ತ ಪತ್ರ ಕೊಡುತ್ತೇನೆಂದು ಭಾಷಣ ಬಿಗಿಯುತ್ತೀರಿ? ಕಣ್ಣೀರು ಸುರಿಸುತ್ತೀರಿ ಇಂತಹ ನಾಟಕವನ್ನು ಜನರು ಇನ್ನು ಎಷ್ಟು ಕಾಲ ನಂಬಬೇಕು?

ರಾಜ್ಯಾದ್ಯಂತ ಆವರಿಸಿರುವ ಬರದಿಂದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ, ದನಕರುಗಳಿಗೆ ಪಶು-ಪಕ್ಷಿಗಳಿಗೆ ಮೇವು ನೀರಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳ ಜನರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ?

ರಾಜ್ಯದಲ್ಲಿ ಸಾವಿರಾರು ಶಾಲೆ-ಕಾಲೇಜುಗಳ ಸುಣ್ಣ-ಬಣ್ಣ ಶೌಚಾಲಯಗಳಿಗೆ ಹಣವಿಲ್ಲ. ವಿಶ್ವವಿದ್ಯಾಲಯಗಳಿಗೆ ಹಣಕಾಸಿನ ನೆರವು ನೀಡುತ್ತಿಲ್ಲ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗುಣಮಟ್ಟದ ಶಿಕ್ಷಣ ಅಧೋಗತಿಗೆ ತಲುಪಿದೆ. 4 ತಿಂಗಳುಗಳಿಂದ ಶಿಕ್ಷಕರಿಗೆ, ವೈದ್ಯರುಗಳಿಗೆ ವೇತನ ಕೊಟ್ಟಿಲ್ಲ , ಮಕ್ಕಳಿಗೆ ಸಮವಸ್ತ್ರ, ಸೈಕಲ್, ಶೂ, ಸಿಕ್ಕಿಲ್ಲ. ಈಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಜ್ಞಾನೋದಯ ಸ್ಟಾರ್ ಹೋಟೆಲಿನಲ್ಲಿ ಆಯಿತೇ?

ನಿಮ್ಮ ಕನಸಿನ ಬಜೆಟ್ ಕೆಲವೇ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿ ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುವೆ ಎಂದು ಗ್ರಾಮ ವಾಸ್ತವ್ಯ ಮಾಡುವ ನೀವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಹಣ ಇಟ್ಟಿದ್ದೀರಿ? ಸರ್ಕಾರದಲ್ಲಿ ನಿಮ್ಮ ಘೋಷಣೆಗಳನ್ನು ಪೂರ್ತಿ ಮಾಡಲು ಹಣ ಎಲ್ಲಿಂದ ತರುತ್ತೀರಿ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಚಂದರಗಿ ಗ್ರಾಮ ವಾಸ್ತವ್ಯಕ್ಕೆ ಸರಳ ವ್ಯಕ್ತಿ ವಿಮಾನ ಸರ್ಕಾರದ ಬೊಕ್ಕಸಕ್ಕೆ ಭಾರ ಎಂದು ರೈಲುನಲ್ಲಿ ಹೋಗಿದ್ದರು ಆದರೆ ಅಲ್ಲಿ ಊಟ,ವಸತಿ ಐಶಾರಾಮಿ ವ್ಯವಸ್ಥೆಗೆ 1.22 ಕೋಟಿ ಖರ್ಚು ಮಾಡಿದ್ದಾರೆ ನಿಮಗೆ ನಾಚಿಕೆಯಾಗಬೇಕು, ನಿಮ್ಮ ಆಡಳಿತ ವೈಖರಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಜೂನ್ 26 ರಂದು ರಾಯಚೂರು ಜಿಲ್ಲೆ ಕರೆಗುಡ್ಡ ಗ್ರಾಮದಲ್ಲಿ ಕುಮಾರಸ್ವಾಮಿ ವಾಸ್ತವ್ಯಕ್ಕೆ ತಯಾರಿ ನಡೆಯುತ್ತಿದೆ ಇಲ್ಲೂ ಕೂಡ ಕನಿಷ್ಠ ಒಂದು ಕೋಟಿ ಖರ್ಚು ಮಾಡುತ್ತಿದ್ದಾರೆ ಸರಳತೆಯ ಲವಲೇಶವೂ ಇಲ್ಲದ ಮುಖ್ಯಮಂತ್ರಿ ರೈತರ ಸಮಸ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.

ಪಂಚತಾರ ಹೋಟೆಲ್ ನಿಂದಲೇ ಆಡಳಿತ ನಡೆಸಬಹುದು ಎನ್ನುವ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ ಕೀರ್ತಿ ನಿಮಗೇ ಸಲ್ಲಬೇಕು ರಾಜಧಾನಿಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಸ್ಥಳೀಯವಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯ ಮುಖ್ಯಮಂತ್ರಿಗೆ ಇಲ್ಲ ಎನ್ನುವುದನ್ನು ಅವರ ಗ್ರಾಮ ವಾಸ್ತವ್ಯ ನಾಟಕ ಸಾಬೀತು ಮಾಡಿದೆ. ಅಧಿಕಾರಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿರುವ ಮುಖ್ಯಮಂತ್ರಿಗಳು ತಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿಗಳನ್ನೇ ನಂಬಲಾಗದ ಸ್ಥಿತಿಯಲ್ಲಿದ್ದಾರೆ. ಮೈತ್ರಿ ಸರ್ಕಾರ ಆಂತರಿಕ ಕಚ್ಚಾಟದಿಂದ ಯಾವಾಗ ಬೇಕಾದರೂ ಬೀಳಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಕಳೆದ 13 ತಿಂಗಳು ಪಂಚತಾರಾ ಹೋಟೆಲ್ ನಲ್ಲಿ ನೀವು ಜೀವನ ನಡೆಸುತ್ತಿದ್ದೀರಿ ಈ ದೇಶದ ಇತಿಹಾಸದಲ್ಲಿ ಯಾವುದಾದರೂ ಮುಖ್ಯಮಂತ್ರಿ ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸಿದ ಉದಾಹರಣೆ ಇದೆಯೇ? ಸಾಮಾನ್ಯ ಜನರು ಬಂದು ಅಲ್ಲಿ ನಿಮ್ಮನ್ನು ಭೇಟಿಯಾಗಲು ಸಾಧ್ಯವೇ? ಗೃಹ ಕಚೇರಿ ಕೃಷ್ಣಾದಲ್ಲಿ ಸಾಮಾನ್ಯ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗೆ ಸ್ಪಂದಿಸದ ನೀವು ಗ್ರಾಮೀಣ ಪ್ರದೇಶಕ್ಕೆ ಹೋಗಿ ಡ್ರಾಮಾ ಮಾಡುತ್ತಿದ್ದೀರಲ್ಲ ಇದು ಎಷ್ಟರ ಮಟ್ಟಿಗೆ ಸರಿ ಎಂದು ವಾಗ್ದಾಳಿ ನಡೆಸಿದರು.ಯುಎನ್ಐ ಎಸ್ಎಂಆರ್ ಕೆವಿಆರ್ 1520

There is no row at position 0.