ಇಟಾವಾ ಏ 20 (ಯುಎನ್ಐ)- ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸ್ನೇಹ ಮೇ.23ರಂದು ಮುರಿದು ಬೀಳಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರಮೋದಿ, ಸಮಾಜವನ್ನು ಒಡೆಯಲು ಯತ್ನಿಸುವವರಿಗೆ ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿನ ರಾಮ್ಲೀಲಾ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್ಪಿ-ಬಿಎಸ್ಪಿ ಗೆಳೆತನ ಮುರಿದು ಹೋಗುವ ದಿನ ನಿಶ್ಚಯವಾಗಿದ್ದು, ಅದು ಮೇ.23 ದಿನಾಂಕವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸಭೆಗಳಿಗೆ ಬೃಹತ್ ಜನಸ್ತೋಮ ಸೇರುವುದು ನೋಡಿದರೆ, ಚುನಾವಣಾ ಫಲಿತಾಂಶ ನಿಶ್ಚಯವಾದಂತೆ ಗೊತ್ತಾಗುತ್ತದೆ. ಯಾವುದೇ ಅಲೆ ಇಲ್ಲ ಎಂದು ದೆಹಲಿಯಲ್ಲಿ ಕುಳಿತಿರುವವರು ಹೇಳುತ್ತಾರೆ. ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕೂತು ಜನರ ಮನೋಸ್ಥಿತಿಯನ್ನು ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಮೊದಲ ಹಾಗೂ ಎರಡನೇ ಹಂತದ ಮತದಾನವನ್ನು ಗಮನಿಸಿದರೆ, ತಮ್ಮನ್ನು ನಿಂದಿಸಿದವರ ಮುಖಗಳು ಪೇಲವವಾಗಿವೆ. ಸ್ವಹಿತಕ್ಕಾಗಿ ಧರ್ಮ ಹಾಗೂ ಜಾತಿಗಳ ಮೇಲೆ ದೇಶವನ್ನು ಒಡೆಯುವವರು ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಕನಸು ಕಾಣುವ ಎರಡು ರೀತಿಯ ಜನರ ನಡುವೆ ಈ ಚುನಾವಣೆ ನಡೆಯುತ್ತಿದೆ. ಎಸ್.ಪಿ ಮತ್ತು ಬಿಎಸ್ಪಿ ಪಕ್ಷಗಳಿಗೆ ಎರಡು ಪ್ರತ್ಯೇಕ ಧ್ವಜಗಳಿದ್ದರೂ, ಅವರ ಉದ್ದೇಶಗಳು ಮಾತ್ರ ಒಂದೇ ಆಗಿವೆ. ಸರ್ಕಾರಗಳು ಬದಲಾದರೂ ವ್ಯಾಪಾರಿಗಳು ಮತ್ತು ರೈತರನ್ನು ದೋಚುವ ಕೆಲಸ ಒಂದೇ ರೀತಿ ನಡೆಯುತ್ತಿದೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವುದನ್ನು ಎಲ್ಲರೂ ಕಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯದ್ದೇ ದೊಡ್ಡ ವಿಷಯವಾಗಿತ್ತು. ಶಾಲೆಗೆ ಹೋಗಲು ಬಾಲಕಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಪರಸ್ಪರ ವೈರಿಗಳಾಗಿ, ಸ್ವಾರ್ಥಕ್ಕಾಗಿ ಕೈ ಜೋಡಿಸಿರುವ ಎಸ್ಪಿ-ಬಿಎಸ್ಪಿಯನ್ನು ಜನರು ನಂಬುವುದಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದ ಶಕ್ತಿಯನ್ನು ಇಂದು ಇಡೀ ವಿಶ್ವವೇ ಗಮನಿಸುತ್ತಿದ್ದು, ಭಾರತವನ್ನು ಗೌರವಿಸುತ್ತಿದೆ. ಸರ್ಕಾರ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಸೇನೆ ನಾಶಗೊಳಿಸಿದೆ. ಎಸ್ಪಿ-ಬಿಎಸ್ಪಿಗೆ ಭಯೋತ್ಪಾದನೆ ನಿಗ್ರಹಗೊಳಿಸಲು ಹಾಗೂ ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಮಟ್ಟಹಾಕಲು ಕೇವಲ ಮೋದಿಯಿಂದ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರ ಮತವೂ ಇದರಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ಯುಎನ್ಐ ಎಸ್ಎಲ್ಎಸ್ ಕೆವಿಆರ್ 1907