Thursday, Mar 28 2024 | Time 17:22 Hrs(IST)
Karnataka Share

ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ: ಡಾ.ಜಿ. ಪರಮೇಶ್ವರ

ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ: ಡಾ.ಜಿ. ಪರಮೇಶ್ವರ
ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ: ಡಾ.ಜಿ. ಪರಮೇಶ್ವರ

ಬೆಂಗಳೂರು, ಜೂ 24 [ಯುಎನ್ಐ] ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮೈಸೂರಿನಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕಾಗಿ 25 ಎಕರೆ ಭೂಮಿ ನೀಡಲು ಸುತ್ತೂರು ಮಠ ಮುಂದೆ ಬಂದಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ

ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ ಸೈನ್ಸ್ ಸಿಟಿಗಾಗಿ ಪ್ರಸ್ತಾಪಿಸಿರುವ ನಿವೇಶನಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುತ್ತೂರು ಮಠ 200 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದೆ. ವಿದ್ಯಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ಈ ಮಠ ಸೈನ್ಸ್ ಸಿಟಿಗಾಗಿ ಸ್ಥಳ ನೀಡುತ್ತಿರುವುದು ಶ್ಲಾಘನೀಯ. ಸುತ್ತೂರು ಮಠ ನೀಡಲಿರುವ ಭೂಮಿಯ ಒಪ್ಪಿಗೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.



ಕೇಂದ್ರ ಸರಕಾರ ಆಯಾ ರಾಜ್ಯ ಸರಕಾರಗಳ ಜೊತೆಗೂಡಿ ಪ್ರತಿ ರಾಜ್ಯದಲ್ಲೂ ಸೈನ್ಸ್ ಸಿಟಿ ನಿರ್ಮಿಸಲು ನಿರ್ಧರಿಸಿದೆ. ಕರ್ನಾಟಕದ ಮೈಸೂರಿನಲ್ಲಿ ಸೈನ್ಸ್ ಸಿಟಿ ಮಾಡಲು ಪ್ರಸ್ತಾಪಿಸಲಾಗಿದ್ದು, ಸುತ್ತೂರು ಮಠ ನೀಡಲಿರುವ ಭೂಮಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೇಂದ್ರದ ನಿಯಮಕ್ಕನುಗುಣವಾಗಿ ಭೂಮಿ ನೀಡುವುದಾಗಿ ಒಪ್ಪಿದ್ದಾರೆ ಎಂದರು.

ಒಟ್ಟು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೈನ್ಸ್ ಸಿಟಿ ಇಡೀ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ನಗರವಾಗಿ ಹೊರಹೊಮ್ಮಲಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರವನ್ನು ತೆರೆಯಲಾಗುತ್ತಿದೆ. ಮಂಗಳೂರು ಹಾಗೂ ದಾವಣಗೆರೆಯಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇನ್ನು 19 ಜಿಲ್ಲೆಯಲ್ಲಿ ಸೈನ್ಸ್ ಕೇಂದ್ರ ತೆರೆಯುವ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದರು.

ಮೈಸೂರು ಆಕರ್ಷಣೀಯ ಪ್ರವಾಸಿ ತಾಣವಾಗಿದ್ದು, ಇಲ್ಲಿ ಸೈನ್ಸ್ ಸಿಟಿ ನಿರ್ಮಿಸುವುದರಿಂದ ಹೆಚ್ಚು ಉಪಯೋಗವಾಗಲಿದೆ. ಈ ಸಿಟಿಯಲ್ಲಿ ಅರ್ಥ್ ಗ್ಯಾಲಕ್ಸಿ, ಸೋಲಾರ್ ಸಿಸ್ಟಮ್ ಸೇರಿದಂತೆ ಅನೇಕ ವಿಸ್ಮಯಗಳು ಇರಲಿವೆ. ಈ ಸಿಟಿ ನಿರ್ಮಾಣದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಮಾನವಾಗಿ ಭರಿಸಲಿದೆ. ಇದು ಕೇಂದ್ರದ ಯೋಜನೆಯಾಗಿರುವುದರಿಂದ ಸ್ಥಳದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಿಟಿ ಪೂರ್ಣಗೊಳ್ಳಲು ಗರಿಷ್ಠ ಐದು ವರ್ಷದ ಬೇಕಾಗಿದ್ದು, ಕನಿಷ್ಠ 3 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೇವಲ ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಇಂಗಿತ ಹೊಂದಿರುತ್ತಾರೆ. ಆದರೆ, ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಅವರಲ್ಲಿ ಆಸಕ್ತಿ ಕೆರಳಿಸಲು ಹಾಗೂ ವಿಜ್ಞಾನ ಕ್ಷೇತ್ರ ಮುಂದುವರೆಯಬೇಕು ಎಂಬ ಉದ್ದೇಶದಿಂದ ಸೈನ್ಸ್ ಸಿಟಿ ತೆರೆಯಲಾಗುತ್ತಿದೆ ಎಂದು ಹೇಳಿದರು.

ಯುಎನ್ಐ ಎಂಎಸ್ಆರ್ ವಿಎನ್ 1332

There is no row at position 0.