KarnatakaPosted at: Jun 24 2019 8:23PM Shareನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿಗೆ ಮನವಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿಗೆ ಮನವಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಂಡ್ಯ, ಜೂ 24(ಯುಎನ್ಐ) ದೆಹಲಿಯಲ್ಲಿ ನಾಳೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಈ ಸಂದರ್ಭದಲ್ಲಿ ಭತ್ತದ ಬೆಳೆಗೆ ನೀರು ಹರಿಸಲು ಅನುಮತಿ ಪಡೆದುಕೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರು ರೈತರಿಗೆ ಭರವಸೆ ನೀಡಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿ ಭತ್ತ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪರಮೇಶ್ವರ ಅವರು ರೈತರನ್ನು ಮನವೊಲಿಸುವ ಯತ್ನ ಮಾಡಿದರು
ಭತ್ತ ಬೆಳೆ ಕಟಾವು ಮಾಡುವ ಕೊನೆಯ ಹಂತದಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಕೊನೆ ಹಂತವಾಗಿ ನೀರು ಬಿಡಬೇಕು ಎಂದು ರೈತರು ಇಂದು ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ, ಮುಂಗಾರು ಮಳೆ 18 ದಿನ ತಡವಾಗಿ ಬಂದಿದೆ. ಕಾವೇರಿಯಲ್ಲಿ ಪ್ರಸ್ತುತ ಕೇವಲ 179.87 ಟಿಎಂಸಿ ನೀರು ಲಭ್ಯವಿದೆ. ಕುಡಿಯುವ ನೀರಿಗಾಗಿಯೇ ಕನಿಷ್ಠ 75 ಟಿಎಂಸಿ ನೀರು ಶೇಖರಿಸಿಡಬೇಕು. ಮಿಕ್ಕ ನೀರನ್ನು ಭತ್ತದ ಬೆಳೆಗೆ ಹರಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
ನಾಳೆ ಕಾವೇರಿ ನಿರ್ವಹಣಾ ಮಂಡಳಿಯ ಸಭೆಯನ್ನು ಕರೆಯಲಾಗಿದೆ. ನಮ್ಮ ರಾಜ್ಯದಿಂದ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗಿಯಾಗಲಿದ್ದಾರೆ. ತಮಿಳುನಾಡಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಿಗೂ ಸಹ ಭತ್ತದ ಬೆಳೆಗೆ ನೀರು ಬಿಡಬೇಕು ಎಂಬ ಬೇಡಿಕೆ ಇದೆ. ನಮ್ಮ ರಾಜ್ಯದ ರೈತರ ಈ ಸಮಸ್ಯೆಯನ್ನು ಮಂಡಳಿ ಮುಂದಿಡುವಂತೆ ಅಧಿಕಾರಿಗೆ ತಿಳಿಸಿದ್ದೇವೆ. ನೀರು ಬಿಡುವ ಸಂಬಂಧ ಮಂಡಳಿಯ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ಹೀಗಾಗಿ ಸಭೆಗೆ ರೈತರ ಸಮಸ್ಯೆ ಮುಟ್ಟಿಸಿ ನೀರು ಹರಿಸಲು ಅನುಮತಿ ಪಡೆದುಕೊಳ್ಳಲಾಗುವುದು ಎಂದು ಹೇಳಿ ರೈತರು ಮನವೊಲಿಸುವ ಪ್ರಯತ್ನ ನಡೆಸಿದರು.
ಮತ್ತೊಂದೆಡೆ ಕಾವೇರಿ ನದಿ ಪ್ರಾಧಿಕಾರದ ಆದೇಶ ಜಾರಿಗೆ ವಿರೋಧಿಸಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಕಾರಿಗೆ ರೈತರು ಮುತ್ತಿಗೆ ಹಾಕಿ ತಮಿಳುನಾಡಿಗೆ ನೀರು ಬಿಡದಂತೆ ಪ್ರತಿಭಟನೆ ನಡೆಸಿದರು. ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸಚಿವ ಡಿ ಕೆ ಶಿವಕುಮಾರ್ ಕಾರನ್ನು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ವೇಳೆ ಮಂಡ್ಯದ ವಿತರಣಾ ನಾಲೆಗಳಿಗೆ ಪ್ರಾಧಿಕಾರ ಅನುಮತಿ ಪಡೆಯದೆ ನೀರು ಬಿಟ್ಟಿದ್ದೀರಿ. ಆದರೆ ಚುನಾವಣೆ ಮುಗಿದ ಮೇಲೆ ನಾಲೆಗೆ ನೀರು ಬಿಡಿ ಅಂದರೆ ಪ್ರಾಧಿಕಾರದ ಕಡೆ ಕೈ ತೋರಿಸುತ್ತೀರಾ ಎಂದು ಸಚಿವ ಶಿವಕುಮಾರ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಜೂನ್ 25ರಂದು ಸಭೆ ಕರೆದಿದ್ದು, ಈ ಸಂಬಂಧವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಯುಎನ್ಐ ಎಸ್ಎಂಆರ್ ಎಎಚ್ 1930